ಬದುಕು ಬೇವು-ಬೆಲ್ಲ

ಸುರಪುತ್ರರನೆ ಹಡೆದ ಕುಂತಿಗೆನಿತೊ ಯಾತನೆ
ಜಗದೇಕವೀರರ ಸತಿ ಪಾಂಚಾಲಿಗೆ ಸುಖವೆಲ್ಲಾ ದಕ್ಕಿತೆನೇ
ತಾಯ ತಲೆಕಡಿದ ಗುರುಪುತ್ರಗಿರಲಿಲ್ಲವೇ ಪ್ರೀತಿ
ಮಾತೃ ಭಕ್ತನು ಅವನು ಎಂದೇ ಪ್ರತೀತಿ

ಚಕ್ರವ್ಯೂಹದೆ ಸಿಲುಕಿದ ಬಾಲವೀರನ
ಪಿತಗೆ ಪುತ್ರಶೋಕವೇ ನಿರಂತರ
ಸಿಂಹಾಸನದಿಂದೂಡಿದ ಕಂದ
ಧ್ರುವನಿಂದು ಗಗನದಲಿ ಅಜರಾಮರ

ಶ್ರೀರಾಮಸತಿಗೆ ಹೂವಿನಾಸಿಗೆ ಇಲ್ಲ
ಜೀವನ ಪರ್ಯಂತ ವನವಾಸವೇ ಎಲ್ಲ
ಸತ್ಯವನೆ ನುಡಿದ ಹರಿಶ್ಚಂದ್ರಗೆ ಸತಿಸುತ ವಿಯೋಗ
ಸತ್ಯವಾನಗೆ ಸಾವಿತ್ರಿಯಿಂದ ಬದುಕುವ ಸುಯೋಗ

ವಿಧಿಯ ಪಗಡೆಯಾಟದಿ ದಾಳದಂತೆ ನಾವು
ಬದುಕಿದು ಸಿಹಿಯ ಬೆರೆಸಿದ ಬೇವು
ಬರಿಯ ಸುಖವನಿಲ್ಲಿ ಯಾರಿಗೂ ಕಾಣೆ
ನೋವನುಂಡು ನಗುವುದೇ  ಬದುಕು ತಾನೆ

No comments:

Post a Comment