ಅನಘವರದ (ಕಾಗುಣಿತಾಕ್ಷರವಿಲ್ಲದ ಪ್ರಯತ್ನ)

ಕಮಲವದನ ವನಜಳನಯನ
ಗರಳಧರಶಯನ ಭವಭಯಹರಣ
ತಳಮಳ ಮನದ ಕಳವಳ ದಹನ
ಘನತಮಶಮನ ಖಳಗಣ ದಮನ

ಯ 
ಪವನಜಭಯದ  ಪದಕ  
ಯಮತನಯನ ಪರಮಸಖ
ಕದನಕಲಹ ಹನನ ಮದನಜನಕ

ಪರಮಪದ ವಸನ ವಗಢ ಮಥನ
ಅಮರಕವಚ ಜಯ ವದನ
ಜಲಜಭವತನಯನ ಪರವಶ 
ಅನಘವರದ ಅನವರತ ನಮನ

ಹರಸು ಗಣಪ

ವಂದನೆ ದೇವನೆ ಸುಗುಣಸಾಗರ ಗಣಪನೆ
ಶರಣು ನಿನಗೆ ಜಗನ್ಮಾತೆಯ ಪ್ರೇಮ ಸುತನೆ

ತಾಯ ತನುವಲಿ ಮೂಡಿ ಬಂದೆ
ತಂದೆಯೊಲವಲಿ ಮರುಜೀವ ಪಡೆದೆ
ಮಾತಾ ಪಿತರೇ ಲೋಕ ಎಂದೇ
ಅಗ್ರ ಪೂಜೆಯು ನಿನಗೆ ತಂದೆ

ಪುಟ್ಟ ಬಾಲನ ರೂಪ ಧರಿಸಿ
ಆತ್ಮಲಿಂಗವ ಭುವಿಗೆ ಇರಿಸಿದೆ
ಅಷ್ಟ ಅಸುರರ ಮೆಟ್ಟಿ ನಿಂತೆ
ವ್ಯಾಸನುಡಿದ ಭಾರತವ ಬರೆದೆ

ವಿಘ್ನನಾಶಕ ವಿಜಯ ನೀಡು
ಅಂಧಕಾರವ ದೂರ ಮಾಡು
ಬುದ್ಧಿದಾಯಕ ವಿದ್ಯೆ ಕರುಣಿಸು
ವಕ್ರತುಂಡನೆ ಅನವರತ ಹರಸು

ಕರ್ನಾಟಕ ಮಾತೆಯೇ

ಕರ್ನಾಟಕ ಮಾತೆಯೇ ನಮ್ಮೆಲ್ಲರ ದೈವ
ಸಿರಿಗನ್ನಡ ಸವಿನುಡಿಯೆ ನಮ್ಮೆಲ್ಲರ ಜೀವ ||
ಅಭಿಮಾನದ ನೆಲೆ ನಮ್ಮದು ಕಲಿವೀರರ ಬೀಡು
ಮಾಧುರ್ಯವೆ ಮೈದುಂಬಿದ ಕವಿಸಂತರ ಹಾಡು
ಗಿರಿವನಝರಿ ಜಲಪಾತದ ಶಿಲ್ಪಕಲೆಯ ನಾಡು
                                                   ||ಕರ್ನಾಟಕ||
ಒಂದಾಗುತ ಕನ್ನಡದಾ ಕೈಗಳು ನೂರಾರು
ನಾವೆಳೆಯುವ ಆ ತಾಯಿಯ ಕೂರಿಸಿ ಹೊಂದೇರು
ಎದೆಗೂಡಿನ ಗುಡಿಗುಡಿಯಲು ದೀಪವ ನಾವ್ ಉರಿಸಿ
ಬೆಳಗುವ ನಾವ್ ಆರತಿ ಜಯಘೋಷವ ಮೊಳಗಿಸಿ 
                                                   ||ಕರ್ನಾಟಕ||
ಕನ್ನಡದ ಹೆಮ್ಮರಕೆ ನಾವುಗಳೇ ಹೊಸ ಚಿಗುರು
ಕರುನಾಡಿನ ಆಳದಲಿದೆ ನಮ್ಮಯ ತಾಯ್ ಬೇರು
ಸೊಗಸೂಸುತ ತಾನರಳಲಿ ಕನ್ನಡದ ನವಕುಸುಮ
ಶಿರಬಾಗುತ ರಾಜೇಶ್ವರಿ ನಿನಗೆ ನಮಿಪೆವಮ್ಮ
                                                   ||ಕರ್ನಾಟಕ||

ಯಾಕೆ ದೂರವಾದೋ ತಂದೆ

ಯಾಕೆ ದೂರವಾದೋ ತಂದೆ ಪೊರೆಯದೆನ್ನನು ನೀನು
ಶೋಕಸಾಗರದಲೆನ್ನ ನೂಕಿ ಮರೆತುಹೋದೆ

ಧನಕನಕಗಳ ಬಯಸಿ ಬೇಡುವನಿವನೆಂದೇ
ಮನಕಾಮನೆಗಳನೆಲ್ಲ ಮುಂದಿಡುವನೆಂದೇ
ಜನಕನಂತೆ ಎನ್ನ ಪೊರೆಯಬೇಕಾದವನೇ
ನೆನಹು ಬಾರದೇ ನಿನ್ನ ನಂಬಿ ನಿಂತವನದು

ಶಿರವ ಬಾಗುವೆ ಎನ್ನ ಪಾಪಗಳ ಪರಿಹರಿಸು
ವರವ ಕರುಣಿಸಿ ಹರಸು ಸರಿದಾರಿಯಲಿ ನಡೆಸು
ತರವಲ್ಲ ಪಾಮರನ ಕಡೆಗಣಿಸಿ ನಡೆಯುವುದು
ಕರಪಿಡಿದು ನಡೆಸು ವಾಸುದೇವನ ಸುತನೆ

ಆರ ಭಯವು ನಿನಗೆ ಶ್ರೀರಾಮಚಂದಿರನೆ

ಆರ ಭಯವು ನಿನಗೆ ಶ್ರೀರಾಮಚಂದಿರನೆ
ಪರಮ ಪುರುಷೋತ್ತಮ ಕೌಸಲ್ಯಸುತನೇ

ಧನುವೇರಿಸಿದನುಜನು ಸನಿಹದಲಿರುತಿರಲು
ಆನುಸರಿಸಿ ನಡೆವ ಅಭಿಮಾನಸತಿಯಿರಲು
ಹನುಮ ಕಾದಿರಲು ವಿನಯದಿ ನಿನ್ನಾಣತಿಗಾಗಿ
ಅನುಗಾಲ ಮುನಿಜನರು ಹಾರೈಸುತಿರಲು

ಆರುಕಾಯುವರಿಲ್ಲ ಅಜ್ಞಾನಿ ನಾನಿಲ್ಲಿ
ಪಾರು ಮಾಡಯ್ಯ ಭವಭಯವ ಬಿಡಿಸಿ
ಬೀರು ಕರುಣೆಯ ಸ್ವಾಮಿ ಲೋಕಾಂತರಂಗ
ತೋರುತಭಯವ ಸಲಹು ಶ್ರೀಪತಿಯೆ ರಾಘವನೆ

ಮದ್ದಾನೆ ಬಂದಿಳಿದು

ಮದ್ದಾನೆ ಬಂದಿಳಿದು ಮನದ ಬಯಲಿನಲಿ
ಗುದ್ದಾಡಿ ಇದ್ದುದೆಲ್ಲವ ತುಳಿದು ತೀರಿಸುತಿದೆ
ಮುದ್ದಾದ ಗೋವಿಂದ ತ್ವರಿತದಲಿ ಬಾರೊ
ಖುದ್ದಾಗಿ ಮತ್ತೇರ್ದ ಮಾತಂಗಕಂಕುಶವನಿಡಿದು

ಎತ್ತರೆತ್ತರ ಬೆಳೆದಿದ್ದ ಪ್ರೀತಿ ಸ್ನೇಹಗಳು
ತತ್ತರಿಸಿ ಉರುಳುತಿವೆ ಆಯತಪ್ಪಿ
ಒತ್ತರಿಸಿ ನಿಂತ ನಮ್ರ ನಂಬುಗೆಯನೆಲ್ಲ
ಎತ್ತಲೋ ದೂರಕ್ಕೆ ಕಿತ್ತೊಗೆಯುತಿದೆ ಸೊಕ್ಕು

ಮದ ಯಾವ ಮಾಯದಲಿ ಹೊಕ್ಕಿತೋ ನಾಕಾಣೆ 
ಕದಮುರಿದು ತಿಳಿಯಾದ ಮನಸಿನೊಳಗೆ
ಇದರೊದೆತ ಅತಿಯಾಯ್ತು ಬಾರಯ್ಯ ತಂದೆ
ಹದಗೊಳಿಸೆನ್ನ ಮನವ ಮೊದಲಿನಂತೆ

ಇಷ್ಟು ನಿಷ್ಠುರವೇಕೆ

ಇಷ್ಟು ನಿಷ್ಠುರವೇಕೆ ಕಷ್ಟದೊಳು ಕಡೆಗಣಿಸಿ
ದೃಷ್ಟಿಯನೆತ್ತಲೋ ನೆಟ್ಟು ನಿಂತಿರುವೆ ದೇವಾಧಿದೇವ?

ಪಟ್ಟು ಸಡಿಲಿಸು ತಂದೆ ದಿಕ್ಕೆಟ್ಟು ಬಂದಿರುವೆ
ಕೆಟ್ಟು ಜಗದೊಳು ನಾನು ನಿನ್ನನೇ ನಂಬಿರುವೆ
ಅಟ್ಟು ಚಿಂತೆಯನೆಲ್ಲ ಬಾಳಿನಾಚೆಯ ತಟಕೆ
ಬಿಟ್ಟು ಬಾಳೆನು ನಿನ್ನ ನಾಮಾಮೃತವನು

ಮುನಿಯುವುದು ತರವೇ ಅರಿಯದಾತನ ಮೇಲೆ
ಹನಿಗರುಣೆಯಿಟ್ಟರೂ ಕರಗುವುವು ದುರಿತಗಳು
ಕನಿಕರದಿ ಕಾಪಾಡು ಇರಿಸಿ ನಿನ್ನಯ ಕೃಪೆಯ
ನೀನಿರದೆ ತೃಣವಿದೀ ಬದುಕು ಕರುಣಾಳು ಪ್ರಭುವೇ

ಪಂಥವೇನುಂಟು

ಪಂಥವೇನುಂಟು ನನ್ನೊಡನೆ ನಿನಗೆ
ಹೇಳಯ್ಯ ಸಿರಿದೊರೆಯೆ... ನಾನಂತು ಅರಿಯೆ

ಸಿಹಿಯಾದ ನೊರೆಹಾಲ್ಗಡಲಿನಲಿ ಮೊರೆವ
ಜೋಗುಳವನಾಲಿಸುತ ನೀ ಒರಗಿ
ಭವಲೋಕದೊಳಗೆನ್ನ ತೊರೆದು ಕಾಡಿಸುತಿರುವೆ

ಹಿರಿದಾದ ಅಖಿಲಾಂಡಲೋಕವನು ಪೊರೆದು
ಸಿರಿವರನೆ ಸಂಭ್ರಮದಿ ನೀ ನಿರುತ
ಇಹಬಂಧನದೊಳೆನ್ನ ಇರಿಸಿ ನೋಡುತಲಿರುವೆ

ಸಮನೇನು ನಾನಿನಗೆ ದೇವದೇವರದೇವ?
ಇಂತೇಕೆ ಪಂಥವಿದು ಶ್ರೀಕಾಂತ ನನ್ನೊಡನೆ?
ಆಂತರ್ಯದೊಳಗೆಲ್ಲ ನಿನ್ನನೇ ಸ್ಮರಿಸಿರುವೆ
ನಿಂತು ಕಾಯೋ ಪ್ರಭುವೆ... ವೇದಾಂತ ವಿಭುವೆ...

ನೇಸರನುದಯ

ನೋಡದೋ ದೂರ ದಿಗಂತದಂಚಿನಲಿ
ನೇಸರನುದಯಿಸುತಿಹ
ಬಂಗಾರದುಂಗುರಕೆ ರಾಗರಶ್ಮಿಯ
ಹೊಳಪ ಮೈದುಂಬಿ ಮೆರೆದು

ಸಹಸ್ರ ರತ್ನರಾಗ ರಶ್ಮಿ
ಹೊಮ್ಮಿ ಚಿಮ್ಮಿ ಹರುಷದಿ
ಮೂಡುತಿರುವ ಭಾಸ್ಕರನು
ತಾಮಸ ತಾನಳಿಸೆ ಜಗದಿ

ತಿರೆಯನಾಳ್ವ ತಿಮಿರ ತೊಡೆಯೆ
ಹೊನ್ನ ತೇಜ ನಗುತಿಹ
ತಮದ ಗಾಢ ಹೊನಲನಳಿಸೆ
ತವಕದಲ್ಲಿ ಬರುತಿಹ

ಬೊಕ್ಕತಲೆ

ಬೊಕ್ಕತಲೆಯ ಬೋಳುಮಂಡೆ
ಚೊಕ್ಕವಾಗಿ ಹೊಳೆದಿದೆ
ಮಳೆಯು ಬಂದು ಸಾಪುಗೊಂಡ
ಬಂಡೆಯಂಥ ನುಣುಪಿದೆ

ಕರಿಯ ಬಿಳಿಯ ಎಳೆಯ ಹಳೆಯ
ಒಂದು ಕೂದಲಿಲ್ಲದೆ
ಬಸಿಲಿನಲ್ಲಿ ಪ್ರತಿಫಲಿಸುವ
ಗುಮ್ಮಟವ ಹೋಲುತಿದೆ

ಕೇಶವಿರದ ಮಂಡೆಯೇನು
ತನ್ನೊಡೆಯನ ಹಳಿವುದೇ...?
ಯಾರೆ ಬರಲಿ ಎಂದಿನಂತೆ
ಹೊಳೆವ ನಗುವ ಚೆಲ್ಲಿದೆ

ಬೆಳಕಿದೇಕೆ ಬಾಡಿದೆ

ಬೆಳಕಿದೇಕೆ ಬಾಡಿದೆ...?
ಹೊಸಕಿರಣವ ಸೂಸದೆ

ಮಬ್ಬು ಮಸುಕು ಬಯಲಿನಲ್ಲಿ
ಹೊಸಹುರುಪನು ತಾರದೆ
ಕಪ್ಪಡರಿದ ಜಗದ ಒಡಲ
ಕಾರ್ಗತ್ತಲ ಸೀಳದೆ

ಶಕ್ತಿಯೆಲ್ಲ ಉಡುಗಿದಂತೆ
ಸೋತು ಸೊರಗಿ ಬಿದ್ದಿದೆ
ಕೊಡವಿ ಎದ್ದು ಹೊಳೆಯದೇನೆ
ಮಂಕು ಕವಿದು ಕುಳಿತಿದೆ

ಕರಿನೆರಳಲಿ ಮರೆಯಾದ
ಸತ್ವ ತೆರೆದು ತೋರದೆ
ಕೋರೈಸುವ ಕಾಂತಿ ಬೀರಿ
ನಗುತ ಮಿಂಚಿ ಮಿನುಗದೆ

ಭರವಸೆಯ ಹಕ್ಕಿ

ಮುರಿದು ಬಿದ್ದ ಗೂಡ ತೊರೆದು
ಹಕ್ಕಿಯೊಂದು ಹಾರಿದೆ
ತೆರೆದ ಬಾನ ದಿಟ್ಟಿಸುತ್ತ
ನೂರು ಕನಸ ಕಂಡಿದೆ

ಹೊಸಬಾಳಿನ ಹೊಂಗನಸು
ಮನದಾಳದಿ ಮೂಡಿದೆ
ಭರವಸೆಯ ಹೊಸ ಮುಗಿಲು
ಬಾಂದಳದಿ ತೇಲಿದೆ

ನವಜೀವನ ಕಟ್ಟಿಕೊಳಲು
ಹಕ್ಕಿ ತಾನು ಹೊರಟಿದೆ
ನೋವು ದುಃಖ ದುಗುಡಗಳ
ತೂರಿ ಮೇಲೆ ಹಾರಿದೆ

ಬತ್ತಿದೆ ಕೆರೆ

ಎಂಥಾ ಸಿರಿ ಇತ್ತು ನೀರಿನ ಸೆಲೆ ಇತ್ತು
ಹಸಿರಿನ ಚೆಲುವರಳಿ ಊರೆಲ್ಲ ನಗುತಿತ್ತು

ಸಿಹಿನೀರ ಕೆರೆಯೊಂದು ಊರ ಮಗ್ಗುಲಲಿತ್ತು
ಹೋಗಿಬರುವವರಿಗೆ ತಂಪನೆರೆಯುತಿತ್ತು
ಬಾಯಾರಿ ಬಳಲಿದ ಜನಜಾನುವಾರಿಗೆ
ತನ್ನೊಡಲ ಸೀನೀರ ಕರೆದು ಕುಡಿಸುತಿತ್ತು

ಈಗೆಲ್ಲೋ ಕಾಣದು ಕೆರೆ ಎಂದೋ ಬತ್ತಿಹುದು
ಬಳಲಿ ಬಂದವರೆಲ್ಲ ಬಾಯಾರಿ ನಿಂದವರೆ
ಸಿಹಿನೀರ ಕೆರೆಯ ಮನದೊಳಗೆ ನೆನೆದವರೆ
ನೀರಿಲ್ಲದ ಊರಲ್ಲಿ ಕಣ್ಣೀರ ಕರೆದವರೆ