ನೋವು ನಲಿವುಂಡಾಯ್ತು ಸಾಕಿನ್ನು ಬಿಡು ಬದುಕೆ
ಪೋಪೆ ಜಗದೋದ್ಧಾರನ ದಿವ್ಯ ಸನ್ನಿಧಿಗೆ ||
ಪ್ರಣಯಸುಖವಾಯ್ತು ವಿರಸ ಮುನಿಸಾಯ್ತು
ಹಾಲುಗಲ್ಲದಸುಳೆಗಳ ಲಾಲಿಸಿ ಪಾಲಿಸಿಯಾಯ್ತು
ಬಂಧು ಬಾಂಧವರೊಡನೆ ಮಿಂದು ಬಂದದ್ದಾಯ್ತು
ಕಷ್ಟ-ಕೋಟಲೆಗೆಲ್ಲ ಕಂಬನಿ ಮಿಡಿದದ್ದಾಯ್ತು
ಕಾಲವಿದು ಚಿರವಲ್ಲ ಬದುಕಿನ್ನು ತರವಲ್ಲ
ತನು ಬಾಗಿದೆ ಮನ ಮಾಗಿದೆ
ಸುಖ-ದುಃಖವನು ಸಮನಾಗಿ ನೋಡುತ
ಕಲ್ಲಿನಂತಿದೆ ಹೃದಯ ಬಸವಳಿಯದೆ
ಇನ್ಯಾವ ಹಂಗಿಲ್ಲ ದೊರೆತನವು ಬೇಕಿಲ್ಲ
ಮಹದಾಸೆ ಎನಗಿಲ್ಲ ಅವನ ಕಾಣ್ಪುದಲ್ಲದೆ
ಮನದೊಳಿಲ್ಲ ಸಿರಿತನದ ಬಯಕೆ
ಹೋಗಬೇಕಿದೆ ಇನ್ನು ಅವನಿರುವ ಜಗಕೆ
ನೋವು ನಲಿವುಂಡಾಯಿತು ಸಾಕಿನ್ನು ಬಿಡು ಬದುಕೆ
ಪೋಪೆ ಜಗದೋದ್ಧಾರನ ದಿವ್ಯ ಸನ್ನಿಧಿಗೆ ||
No comments:
Post a Comment