ದಿವ್ಯಸನ್ನಿಧಿಯಾಸೆ

ನೋವು ನಲಿವುಂಡಾಯ್ತು ಸಾಕಿನ್ನು ಬಿಡು ಬದುಕೆ
ಪೋಪೆ ಜಗದೋದ್ಧಾರನ ದಿವ್ಯ ಸನ್ನಿಧಿಗೆ ||

ಪ್ರಣಯಸುಖವಾಯ್ತು ವಿರಸ ಮುನಿಸಾಯ್ತು
ಹಾಲುಗಲ್ಲದಸುಳೆಗಳ ಲಾಲಿಸಿ ಪಾಲಿಸಿಯಾಯ್ತು
ಬಂಧು ಬಾಂಧವರೊಡನೆ ಮಿಂದು ಬಂದದ್ದಾಯ್ತು
ಕಷ್ಟ-ಕೋಟಲೆಗೆಲ್ಲ ಕಂಬನಿ ಮಿಡಿದದ್ದಾಯ್ತು

ಕಾಲವಿದು ಚಿರವಲ್ಲ ಬದುಕಿನ್ನು ತರವಲ್ಲ
ತನು ಬಾಗಿದೆ ಮನ ಮಾಗಿದೆ
ಸುಖ-ದುಃಖವನು ಸಮನಾಗಿ ನೋಡುತ
ಕಲ್ಲಿನಂತಿದೆ ಹೃದಯ ಬಸವಳಿಯದೆ

ಇನ್ಯಾವ ಹಂಗಿಲ್ಲ ದೊರೆತನವು ಬೇಕಿಲ್ಲ
ಮಹದಾಸೆ ಎನಗಿಲ್ಲ ಅವನ ಕಾಣ್ಪುದಲ್ಲದೆ
ಮನದೊಳಿಲ್ಲ ಸಿರಿತನದ ಬಯಕೆ
ಹೋಗಬೇಕಿದೆ ಇನ್ನು ಅವನಿರುವ ಜಗಕೆ

ನೋವು ನಲಿವುಂಡಾಯಿತು ಸಾಕಿನ್ನು ಬಿಡು ಬದುಕೆ
ಪೋಪೆ ಜಗದೋದ್ಧಾರನ ದಿವ್ಯ ಸನ್ನಿಧಿಗೆ ||

No comments:

Post a Comment