ಕಾಲವೊಂದಿತ್ತು ;
ಭೂಮಿ ಆಗಿರಲಿಲ್ಲ ಯಾರಪ್ಪನ ಸ್ವತ್ತೂ
ಆಣೆ ಭಾಷೆಯಿತ್ತರೆ ನ್ಯಾಯ ಮುಗಿಯುತಿತ್ತು
ಮೋಸ ನಡೆಯದಂತೆ ಧರ್ಮ ಕಾವಲಿದ್ದಿತು
ಕಾಲ ಉರುಳಿತು ;
ನೊಗ-ನೇಗಿಲು ಹಿಡಿದು ಉಳುವವರ
ಮೇಲೆ ಹರಿಹಾಯ್ದಿತ್ತು
ಖಡ್ಗ ಕೋವಿ ಹಿಡಿದು ಆಳುವವರ ದಂಡು
ಕಟ್ಟಿಗೆ-ಕೋಲು ಹಿಡಿದು ಬದಿದಾಡಿದವರ
ಮೆಟ್ಟಿ ನಿಂತವು ಖಡ್ಗ ಕೋವಿಗಳು
ಲಗ್ಗೆಯಿಟ್ಟವು ವಸಾಹತುಶಾಹಿಗಳ ಹಿಂಡು
ಕಾಲ ಬದಲಾಗಿದೆ ;
ಖಡ್ಗ ಝಳಪಿಸುತ್ತಿಲ್ಲ
ಕೋವಿ ಗಡರುತ್ತಿಲ್ಲ
ವಸಾಹತುಶಾಹಿಗಳ ಆಡಳಿತವಿಲ್ಲ
ಆದರೂ ಮರಳಿ ಬಂದಿಲ್ಲ ಸರಿದ ಆ ದಿನಗಳು
ಕಾರಣ ಕಾಲ ಬದಲಾಗಿರಬಹುದು
ಜಾಗತೀಕರಣದ ಹೊಳೆ ಕೊಚ್ಚಿರಬಹುದು
ಮನದ ಹೂರಣ ಹಳಸಿರಬಹುದು
ಅಥವಾ..
ಅಂತಃಕರಣ ಸತ್ತು ಎದೆಯೊಳಗೆ ಹೂಳು ತುಂಬಿರಬಹುದು…
ಅಂತಃಕರಣ ಸತ್ತು ಎದೆಯೊಳಗೆ ಹೂಳು ತುಂಬಿರಬಹುದು…
ReplyDeleteಇಷ್ಟವಾಯಿತು....