ನಮಿಪೆ ವಾಲ್ಮೀಕಿ

ವಂದನೆ ಅಭಿವಂದನೆ ಅದಿಕಾವ್ಯದ ಸೃಜನನೆ
ನಮಿಪೆ ನಿಮಗೆ ಭರತಖಂಡದ ಪ್ರಥಮ ಕವಿಯೇ 

ಬರೆದೆ ಮುನ್ನುಡಿ ಕವಿಯ ಕುಲಕೆ
ಹೊಳೆವ ಮಣಿಯು ಕಾವ್ಯ ಮುಕುಟಕೆ
ಮಡಿದ ಕ್ರೌಂಚಕೆ ಮಿಡಿದ ಋಷಿಯೆ
ಮಹತ್-ಕಾವ್ಯವ ಬರೆದ ಮುನಿಯೆ

ಲೋಕಮಾತೆಯ ಶೋಕ ಕಳೆದು
ನೊಂದಸೀತೆಗೆ ಆಸರೆಯನೆರೆದು
ರಾಮಸುತರ ಸಾಕಿ ಸಲಹಿದೆ
ದಿವ್ಯಪ್ರೇಮದಿ ಹರಸಿ ಬೆಳೆಸಿದೆ

ವಿಶ್ವಪೂಜಿತ ಗ್ರಂಥದಾಕರ
ವಲ್ಮೀಕದೊಡಲ ಅಮರ ಸಂತ
ಹಾಡಿಹೊಗಳಿದೆ ರಾಮ ಚರಿತೆಯ
ಜಗಕೆ ಅರುಹಿದೆ ಪುರುಷೋತ್ತಮನ ಕಥೆಯ

No comments:

Post a Comment